ಸಾಹಿತ್ಯ ಕ್ಷೇತ್ರಕ್ಕೆ ಕುಂದರನಾಡಿನ ಸಾಹಿತಿಗಳು ನೀಡಿದ ಕೊಡುಗೆ ಅಪಾg

ಗೋಕಾಕ: ಸಾಹಿತ್ಯ ಕ್ಷೇತ್ರಕ್ಕೆ ಕುಂದರನಾಡಿನ ಸಾಹಿತಿಗಳು ನೀಡಿದ ಕೊಡುಗೆ ಅಪಾರ, ತಮ್ಮ ಕೃತಿಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಬೆಳಗಾವಿಯ ಹಿರಿಯ ಸಾಹಿತಿ ಡಾ: ರಾಮಕೃಷ್ಣ ಮರಾಠೆ ಹೇಳಿದರು.
ಅವರು ಶನಿವಾರದಂದು ನಗರದ ಜಿಇಎಸ್ ಕಾಲೇಜ ಸಭಾಂಗಣದಲ್ಲಿ ಇಲ್ಲಿಯ ಜಿಇಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಪಂಚಮಿ ಮೀಡಿಯಾ ಪಬ್ಲಿಕೇಶನ್ಸ್ ಇವರ ಸಂಯುಕ್ತಾಶ್ರಯದಲ್ಲಿ ಕುಂದರನಾಡಿನ ಮದವಾಲ ಗ್ರಾಮದ ಸುರೇಶ ಮುದ್ದಾರ ಅವರ “ಸಾಂವಿ” ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಕುಂದರನಾಡು ಕರ್ನಾಟಕದ ಕಲೆ, ಸಾಹಿತ್ಯಗಳ ಶಕ್ತಿ ಕೇಂದ್ರವಾಗಿದೆ. ನಿರಂತರ ಸಾಹಿತ್ಯಿಕ ಹಾಗೂ ಸಾಂಸ್ಕೃತೀಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಚೈತನ್ಯ ಸ್ಥಳದಲ್ಲಿ ಅನೇಕ ಮಹಾನ್ ಕವಿಗಳು ಹುಟ್ಟುಹಾಕಿದ ಮಾರ್ಗದಲ್ಲಿ ಅವರ ಪರಂಪರೆಯನ್ನು ಮುಂದುವರಿಸಿಕೊAಡು ಹೋಗುವಂತೆ ಕರೆ ನೀಡಿದರು.
ನಡೆ-ನುಡಿಗಳ ಅಂತರವಿರದೇ ಮೌಲ್ಯಯುತವಾದ ಸಾಹಿತ್ಯವನ್ನು ನೀಡುವುದರೊಂದಿಗೆ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಮೌಲ್ಯಯುತ ಸಂದೇಶಗಳನ್ನು ಯುವಪೀಳಿಗೆಗೆ ನೀಡಿ ಗುಣಾತ್ಮಕ ಸಮಾಜ ಕಟ್ಟುವ ಕಾರ್ಯವಾಗಬೇಕು. ಮೌಲ್ಯಗಳನ್ನು ಸ್ವೀಕರಿಸಬೇಕು. ಉದಾರ, ನಿಷ್ಪಕ್ಷವಾದ ಬರವಣೆಗೆ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕೆAದು ಹೇಳಿದರು.
ಕೃತಿ ಕುರಿತು ಬೆಳಗಾವಿಯ ಸಂಶೋದಕ ಸಾಹಿತಿ ಡಾ: ಪಿ.ಜಿ.ಕೆಂಪಣ್ಣವರ ಮಾತನಾಡುತ್ತಾ ಗ್ರಾಮೀಣ ಬದುಕನ್ನು ನೈಜವಾಗಿ ಜನರ ಮುಂದಿಡುವಲ್ಲಿ ಸುರೇಶ ಮುದ್ದಾರ ಯಶಸ್ವಿಯಾಗಿದ್ದಾರೆ. ಅಪ್ಪಟ ಗ್ರಾಮೀಣ ಸೊಗಡನ್ನು ಒಳಗೊಂಡ ಕಥೆಗಳಲ್ಲಿ ಈ ಭಾಗದ ಭಾಷೆಯನ್ನು ಚನ್ನಾಗಿ ಬಳಸಿಕೊಳ್ಳುವ ಮೂಲಕ ಹಿರಿಯ ಸಾಹಿತಿಗಳಾದ ಕಟ್ಟಿಮನಿ ಹಾಗೂ ಪುರಾಣಿಕರ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಾಹಿತ್ಯದಿಂದ ಸಮಾಜದ ಪರಿವರ್ತನೆ ಸಾಧ್ಯ. ಆ ನಿಟ್ಟಿನಲ್ಲಿ ಲೇಖಕ ಉತ್ತಮವಾದ ಕೃತಿಯನ್ನು ಹೊರತಂದಿದ್ದು ನಾವೆಲ್ಲ ಅವರನ್ನು ಪ್ರೋತ್ಸಾಹಿಸೋಣ. ಸಮಾಜದಲ್ಲಿ ಶೋಷಣೆ, ಬಡತನಗಳ ಭವಣೆ ನೈಜವಾಗಿ ಚಿತ್ರಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದ್ದಾರೆಂದು ಹೇಳಿದ ಅವರು ಕನ್ನಡಿಗರು ಕೃತಿಗಳನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಸಾಹಿತಿ ಪ್ರೋ: ಚಂದ್ರಶೇಖರ ಅಕ್ಕಿ ವಹಿಸಿದ್ದರು. ವೇದಿಕೆ ಮೇಲೆ ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ, ಪ್ರಕಾಶಕ ಶ್ರೀಧರ ಬನವಾಸಿ, ಲೇಖಕ ಸುರೇಶ ಮುದ್ದಾರ, ಪ್ರಾಚಾರ್ಯ ಪ್ರೋ: ವಿ.ವಿ.ಮೋದಿ ಇದ್ದರು.
ಎನ್.ಆರ್.ಪಾಟೀಲ ಸ್ವಾಗತಿಸಿದರು. ಪ್ರಕಾಶ ಸಣ್ಣಮನೆ ನಿರೂಪಿಸಿದರು. ಎಂ.ಎನ್. ಮಾವಿನಕಟ್ಟಿ ವಂದಿಸಿದರು.