ಮೃತ್ಯುಂಜಯ ಸ್ವಾಮೀಜಿ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಆಗ್ರಹಿಸಿ ಜ.14ರಿಂದ ಪಾದಯಾತ್ರೆ.

ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಮೃತ್ಯುಂಜಯ ಸ್ವಾಮೀಜಿ ಅವರು ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಜ.14 ರಿಂದ ಪಾದಯಾತ್ರೆ ಮಾಡಲಾಗುವುದು ಎಂದು ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿನಕ್ಕೆ 20 ಕಿ.ಮೀ. ನಂತೆ ಸುಮಾರು 700 ಕಿ.ಮೀ.ವರೆಗಿನ ಈ ಪಾದಯಾತ್ರೆ ಒಂದು ತಿಂಗಳು ನಡೆಯಲಿದ್ದು, ಕೊನೆಯ ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಈ ವೇಳೆ ಕನಿಷ್ಠ ಐದು ಲಕ್ಷ ಜನ ಸೇರಲಿದ್ದಾರೆ’.
‘ಶನಿವಾರ ಸರ್ಕಾರದ ನಿಯೋಗ ಕೂಡಲಸಂಗಮಕ್ಕೆ ಭೇಟಿ ನೀಡಲಿದೆ. ಈ ವೇಳೆ ಸರ್ಕಾರದಿಂದ ಖಚಿತ ಭರವಸೆ ದೊರೆಯುವ ವಿಶ್ವಾಸವಿದೆ. ಮಹತ್ವದ ಸಭೆಯೂ ನಡೆಯಲಿದ್ದು ಸಭೆ ಸಮಾಧಾನ ತರದಿದ್ದರೆ ಪಾದಯಾತ್ರೆ ನಡೆಸುವುದು ನಿಶ್ಚಿತ’ ಎಂದೂ ಹೇಳಿದರು.